
ಮೊದಲು ನಮ್ಮ ಊರಿನ ಬಗ್ಗೆ ಹೇಳುವುದಾದರೆ ಪೂರ್ಣ ಚಂದ್ರ ತೇಜಸ್ವಿ ಅವರ ‘ಜುಗಾರಿ ಕ್ರಾಸ್’ ಕಾದಂಬರಿಯಲ್ಲಿ ಬರುವ ಜುಗಾರಿ ಕ್ರಾಸ್ ಊರಿನಂತೆ. ಪೂರ್ತಿ ಕಳ್ಳ ಖದೀಮರೆ ತುಂಬಿದ್ದ ಊರು. ಇರೋರಲ್ಲಿ ಯಾರು ಮಹಾನ್ ಕಳ್ಳ ಅಂತ ಎಲ್ಲರಲ್ಲೂ ಸ್ಪರ್ಧೆ. ದಿನಕ್ಕೆ ಎರಡು ಬಾರಿ ಪೋಲೀಸ್ ಜೀಪ್ ಬರ್ದೇ ಇದ್ರೆ ಯಾರಿಗೂ ಸಮಾಧಾನ ಇಲ್ಲ. ಇನ್ನು ಪೋಲೀಸರಿಗಂತೂ ಹುಡುಕುತ್ತಾ ಇರೋರು ಸಿಗದೇ ಇದ್ರೆ, ಕೊನೆಗೆ ಕಟ್ಟೆ ಮೇಲೆ ಕೂತು ಇಸ್ಪೀಟ್ ಆಡೋ ನಾಲ್ಕು ಮುದುಕರನ್ನ ಹಿಡ್ಕೊಂಡ್ ಹೋಗ್ತಾರೆ. ಬಿಡಿಸ್ಕೊಂಡೋಗೋದಿಕ್ಕೆ ಯಾರೂ ಬರದೇ ಇದ್ರೆ ಆ ಮುದುಕರ ಹತ್ರ ಇರೋ ಪುಡಿಗಾಸನ್ನ ತಮ್ಮ ಜೇಬಿಗೆ ಇಳಿಸಿ ಬಿಡ್ತಾ ಇದ್ರು.
ಇನ್ನು ನಾನು ಆ ಮುದುಕರು ಇಸ್ಪೀಟ್ ಆಡೋ ಕಟ್ಟೆ ಎದುರ್ಗಡೆ ಒಂದು ಟೀ ಅಂಗಡಿ ಇಟ್ಕೊಂಡು ವ್ಯಾಪಾರ ಮಾಡ್ತಿದ್ದೆ. ಊರಲ್ಲಿ ಕೆಲ್ಸ ಕಾರ್ಯ ಇಲ್ದೇ ಇರೋರ್ಗೆಲ್ಲಾ ನನ್ ಅಂಗಡೀನೆ ಅಡ್ಡ. ಊರಲ್ಲಿ ಏನೇ ಆದ್ರೂ ಅದರ ಮೊದಲ ವರದಿ ಸಿಕ್ತಾ ಇದ್ದದ್ದು ನಂಗೇ. ಅದಕ್ಕೆ ಟೀ ಮಾರೋ ಜೊತೆಗೆ ಊರಲ್ಲಿ ಏನೇ ಆದ್ರೂ ಅದರ ಮಾಹಿತಿನ ಪೇಪರ್ನೋರಿಗೆ ವರದಿ ಕೊಡ್ತಾ ಇದ್ದೆ.
ಒಂದಿನ ಅಂಗಡಿ ಓಪನ್ ಮಾಡಿ ಬಂದಿರೋ ಗಿರಾಕಿಗಾಗಿ ಟೀ ಮಾಡ್ತಾ ಇದ್ದೆ. ಯಾವತ್ತೂ ಬರೋ ಹಂಗೆ ಪೋಲೀಸ್ ಜೀಪ್ ಅಂಗಡಿ ಎದುರಿಂದ ಪಾಸ್ ಆಯ್ತು. ಜೊತೆಗೆ ಅದರ ಹಿಂದಿನಿಂದ ಸರ್ಕಾರಿ ಆಸ್ಪತ್ರೆ ಆಂಬ್ಯುಲೆನ್ಸ್ ಕೂಡ ಹೋಯ್ತು.
“ಏನಾಯ್ತೋ, ಪೋಲೀಸು ಮತ್ತೆ ಆಂಬ್ಯುಲೆನ್ಸ್ ಎಲ್ಲಾ ಒಟ್ಗೆ ಹೋಯ್ತಲ್ಲೋ” ಅಂತ ಬೆಂಚ್ ಮೇಲೆ ಬೀಡಿ ಸೇದ್ತಾ ಕೂತಿದ್ದ ಸುರೇಶನ್ನ ಕೇಳಿದೆ.
“ಅಯ್ಯೋ ಬಿಡು ಶಂಕ್ರಣ್ಣ, ಇದ್ ಯಾವಾಗ್ಲೂ ಇರೋದೆ. ದಿನಾ ಸಾಯೋರ್ಗೆ ಅಳೋರ್ಯಾರು. ಆಮೇಲೆ ಯಾರು ಸಿಕ್ಕಿಲ್ಲಾ ಅಂದ್ರೆ ಆ ಪೋಲೀಸ್ ಸೂ ಮಕ್ಳು ನಮ್ಮನ್ನ ಎತ್ತಾಕ್ಕೊಂಡೋಗಿ ಲಾಠಿ ಮುರಿಯೋವರ್ಗು ಹೊಡೀತಾರೆ. ಹಿಂದಿನ್ ವಾರ ಕೊಟ್ಟಿರೋ ಏಟಿನ್ ನೋವೇ ಇನ್ನೂ ಹೋಗಿಲ್ಲ, ಅಂತದ್ರಲ್ಲಿ ದಾರಿಲ್ ಹೋಗೋ ಚೇಳ್ನಾ ನಾನ್ ಯಾಕೆ ನನ್ ಚಡ್ಡಿ ಒಳ್ಗಡೆ ಬಿಟ್ಕೋಬೇಕು”
” ಹಂಗಲ್ಲಾ ಕಣೋ, ಅಲ್ ಏನಾಗ್ತಾ ಇದೆ ಅಂತ ನೋಡ್ಕೊಂಡ್ ಬಾ. ಪೇಪರ್ಗೆ ಸುದ್ದಿ ಏನಾದ್ರು ಸಿಗುತ್ತಾ ಅಂತ”
“ಸುಮ್ನೆ ಇರಣ್ಣಾ ನೀನು. ಎಲ್ಲಾದ್ರೂ ಆ ಇನ್ಸ್ಪೆಕ್ಟರ್ ನನ್ನ ನೋಡುದ್ರೆ ಹಂಗೆ ಜೀಪಿಗ್ ತುಂಬ್ಕೊಂಬಿಡ್ತಾನೆ. ಆಮೇಲೆ ನೀನೂ ಬರಲ್ಲ ಆ ನಿನ್ ಪೇಪರ್ನೋರೂ ಬರಲ್ಲ ನನ್ ಕಾಪಾಡಕ್ಕೆ. ಒಂದ್ ಹಾಫ್ ಟೀ ಕೊಡು. ಬೆಳಗ್ಗೆ ನಿನ್ ಟೀ ಹೊಟ್ಟೆಗೋಗಿಲ್ಲಾ ಅಂದ್ರೆ ಒಳ್ಗಡೆ ಇರೋದು ಹೊರ್ಗಡೆ ಬರಲ್ಲಾ”
ಅವನಿಗೆ ಟೀ ಕೊಟ್ಟು ಬೇರೆ ಗಿರಾಕಿಗಳ ದಾರಿಯನ್ನ ಕಾಯುತ್ತಾ ಕೂತೆ. ಹಾಗೆ ಬಂದು ಹೋದ ಎಲ್ಲರ ಬಾಯಲ್ಲೂ ಅದೊಂದೇ ಮಾತು. ಆದ್ರೆ ಯಾಕೆ ಅಂತ ಯಾರಿಗೂ ಗೊತ್ತಿಲ್ಲ. ಬೆಳಗಿನ ಜಾವದಲ್ಲಿ ಬಂದ ಗಿರಾಕಿಗಳೆಲ್ಲಾ ಎದ್ದು ಹೋದ್ರು. ಸುಸ್ತಾಗಿ ಒಂದು ಕಪ್ ಟೀ ಕೈಯಲ್ಲಿ ಹಿಡಿದು ಅಂಗಡಿ ಮುಂದುಗಡೆ ಕೂತು ಬಿಟ್ಟೆ. ಪೂರ್ತಿ ಕಪ್ ಖಾಲಿಯಾಗೋ ಮುಂಚೇನೇ ಮತ್ತದೇ ಜೀಪ್ ಮತ್ತೆ ಆಂಬ್ಯುಲೆನ್ಸ್ ಹಿಂತಿರುಗಿ ಹೋಯ್ತು. ಅದರ ಹಿಂದೆ ಓಡುತ್ತಾ ಬಂದವನು ಸೀನ.
“ಏನಾಯ್ತೋ ಸೀನ, ಹುಚ್ ನಾಯಿ ಏನಾದ್ರೂ ಬೆನ್ ಹಿಡೀತೇನೋ”
” ನಾಯೀನು ಇಲ್ಲ ಗೂಳೀನೂ ಇಲ್ಲ ಶಂಕ್ರಣ್ಣ. ಸುಸ್ತಾಗಿದೆ ಮೊದ್ಲು ನಿಂಬೆ ಹಣ್ಣಿನ್ ಸೋಡಾ ಏನಾದ್ರು ಇದ್ರೆ ಕೊಡು, ಆಮೇಲೆ ಹೇಳ್ತೀನಿ ನಿಂಗೆ ಏನಾಯ್ತು ಅಂತ”
ಹಾಗೆ ದಣಿವಾರಿಸಿಕೊಂಡ ಸೀನ ನನ್ನೆದುರು ಒಂದು ವಿಲಕ್ಷಣ ಘಟನೆಯ ಮುನ್ನುಡಿಯನ್ನ ತೆರೆದಿಟ್ಟ.
” ಶಂಕ್ರಣ್ಣ ಕೆರೆ ತಾವ ಒಂದು ಹೆಣ ಸಿಕ್ಕಿದೆ”
” ಏನ್ ಹೇಳ್ತಾ ಇದ್ಯೋ ಸೀನ, ನಿಜಾನೇನೋ”
” ಹೂ ಮತ್ತೆ, ಅದ್ಕೆ ಅಲ್ವಾ ಪೋಲೀಸು, ಆಂಬ್ಯುಲೆನ್ಸ್ ಎಲ್ಲಾ ಬಂದಿದ್ದು”
“ಯಾರ್ದೋ ಹೆಣ? ಕೊಲೇನೋ ಅಲ್ಲ ಅತ್ಮ ಹತ್ಯೇನೋ?”
” ಯಾವನಿಗೊತ್ತು, ನಂಗೇನ್ ತಿಕ್ಲಾ ಹತ್ರ ಹೋಗ್ ನೋಡೋದಿಕ್ಕೆ. ಏನಾಯ್ತು ಅಂತ ನೋಡೋಕೆ ಹೋಗಿದ್ದ ನಾಲಕ್ ಗಂಡಸ್ರನ್ನ ಆ ಪೋಲೀಸಪ್ಪ ಜೀಪಿಗ್ ತುಂಬಿ ಸ್ಟೇಷನ್ ಕಡೆ ಹೋಗವ್ನೆ”
“ನಿನಿಗ್ ಹೆಂಗ್ ಗೊತ್ತಾಯ್ತೋ ಇದೆಲ್ಲಾ?”
” ನಾನ್ ಬಿಡ್ತೀನಾ, ಕೆರೆ ಮೂಲೇಲಿರೋ ಪೊದೆ ಒಳ್ಗೆ ಕದ್ ಕೂತು ಎಲ್ಲಾನು ನೋಡ್ತಾ ಇದ್ದೆ”
” ಅದ್ ಸರಿ ಯಾರೋ ಸತ್ತೋಗಿರೋದು”
” ಅದ್ ಯಾರೂ ಅಂತಾನೆ ಗೊತ್ತಾಗಿಲ್ಲ, ಯಾರೋ ನಮ್ಮೂರವ್ರು ಅಲ್ಲಾ ಅನ್ಸತ್ತೆ”
” ಏ ಯಾರ್ಗೋ ಅದು ಅಂತ ಕೇಡ್ಗಾಲ ಬಂದಿರೋದು. ಸಾಯೋಕೆ ನಮ್ಮೂರೆ ಆಗ್ಬೇಕಿತ್ತಾ? ಇವಾಗ್ ನಡೀತಿರೋ ರಾಮಾಯಣ ಸಾಕಾಗಿಲ್ಲಾ ಅಂತ ಇದೊಂದ್ ಬ್ಯಾರೆ. ನಮ್ ಊರಿನ್ ಗಂಡಸ್ರು ಏನ್ ಪಾಪ ಮಾಡಿದ್ರೋ ಏನೊ. ಸುಮ್ನೆ ಪೋಲೀಸ್ ಕೈಲಿ ಒದೆ ತಿಂದು ತಿಂದು ಹೆಂಡ್ತಿಗೆ ಹೊಟ್ಟೆ ಬರ್ಸೋ ಶಕ್ತಿನೂ ಇಲ್ಲ ಅವಕ್ಕೆ. ಹಿಂಗಾದ್ರೆ ಒಂದಿನ ನಮ್ಮೂರು ಹಾಳು ಸ್ಮಸಾನ ಆಗತ್ತೆ ನೋಡು”
” ಹಂಗಲ್ಲ ಶಂಕ್ರಣ್ಣ, ಈ ಪೋಲೀಸಪ್ಪನ್ ಆಟದಲ್ಲಿ ನಂಗಂತೂ ಊರಲ್ಲಿ ಅಡ್ಡಾಡೋದೆ ಕಷ್ಟ ಆಗಿದೆ. ಗಟ್ಟಿಮುಟ್ಟಾಗಿದೀನಿ ಅಂತ ನನ್ನೇ ಕರ್ಕೊಂಡ್ ಹೋಗ್ತಾರೆ. ಮೊನ್ನೆ ಆ ತಿರ್ಬೋಕಿ ನಾಗ ರಾಧಕ್ಕನ್ ಸೆರಗ್ ಎಳ್ದ ಅಂತ ಅವ್ನನ್ನ ಊರ್ ತುಂಬಾ ಹುಡ್ಕಿದ್ರು. ಕೊನೆಗೆ ಅವ್ನು ಸಿಕ್ಕಿಲ್ಲಾ ಅಂತ ನನ್ನನ್ನ ಸ್ಟೇಷನ್ ಕಡೆ ಕರ್ಕೊಂಡೋಗಿ, ಅವ್ನ್ ಎಲ್ಲಿದಾನೆ ಹೇಳು ಅಂತ ಅಂಡ್ ಮೇಲೆ ಸರಿಯಾಗ್ ಬಾರ್ಸಿದ್ರು. ನೋಡು ಈವಾಗ್ಲು ಕೂರಾಕಾಯ್ತಿಲ್ಲ ನಂಗೆ”
” ಒಹೋ ನೀನೇನ್ ಕಮ್ಮಿ. ಅದೇ ರಾಧಕ್ಕನ್ ಹಿಂದ್ಗಡೆ ಸುತ್ತಾಡ್ತಾ ಇದ್ದೆ ಒಂದ್ ಕಾಲ್ದಲ್ಲಿ. ಅದಿಕ್ಕೇ ಯಾವನೋ ನಿನ್ ಹೆಸ್ರೂ ಹೇಳವ್ರೆ. ಸರಿ ನೀನ್ ಹೋಗಿ ಯಾರು, ಯಾಕೆ ಅನ್ನೋದೆಲ್ಲಾ ವಿಚಾರ್ಸು ಊರಲ್ಲಿ”
“ಅಯ್ಯೋ ಆ ಮಾರಮ್ಮನ್ ಮೇಲ್ ಆಣೆ, ನನ್ ಕೈಲ್ ಆಗಲ್ಲಾ ಅದೆಲ್ಲಾ. ನೀನ್ ಏನ್ ಬೇಕಾದ್ರು ಮಾಡ್ಕೋ. ನಾ ಬರ್ತೀನಿ. ರಾತ್ರಿ ಕಂಡ್ ಬಾವಿಗೆ ನಾನ್ಯಾಕ್ ಹಗಲೊತ್ತಲ್ಲೇ ಹೋಗ್ ಹಾರ್ಲಿ”
ಹಾಗೆ ಸೀನ ಎದ್ದು ಹೋದ ಕೂಡಲೆ ಜಿಲ್ಲಾ ಕೇಂದ್ರದಲ್ಲಿದ್ದ ಪೇಪರ್ನೋರ ಕಛೇರಿಗೆ ಫೋನ್ ಮಾಡಿ ಕೆರೇಲಿ ಹೆಣ ಸಿಕ್ಕಿರೋ ವಿಷಯವನ್ನು ಹೇಳಿದೆ. ಅವ್ರು ಸಂಜೆ ಅಸ್ಟೊತ್ತಿಗೆ ನಿಮ್ಮೂರ್ ಕಡೆ ಬರೋ ಬಸ್ ಡ್ರೈವರ್ ಹತ್ರ ಚೂರ್ ದುಡ್ ಕಳುಸ್ತೀವಿ. ಆ ವಿಷಯದ ಬಗ್ಗೆ ಸರಿಯಾಗ್ ವಿಚಾರ್ಸಿ ಏನು ಎತ್ತ ಅಂತ ಹೇಳು ಅಂತಂದ್ರು.
ಹಾಗೆ ಅವರು ಕೊಡೋ ಮೂರು ಕಾಸಿನ ಆಸೆಗೆ ಆ ಸುದ್ದಿಯ ಮೂಲವನ್ನ ಕೆದಕುತ್ತಾ ಹೊರಟೆ.
ಮೊದಲಿಗೆ ಆ ಪೋಲೀಸಪ್ಪ ಯಾರನ್ನ ಕರ್ಕೊಂಡ್ ಹೋಗಿದಾನೆ ಅಂತ ವಿಚಾರಿಸಿದಾಗ ಗೊತ್ತಾಗಿದ್ದು, ಅದೇ ಕೆರೆ ಪಕ್ಕ ಇರೋ ಮೂಲೆ ಮನೆ ಗಂಡಸ್ರನ್ನ ಅಂತ. ಹಂಗಾದ್ರೆ ಮೂಲೆ ಮನೆ ಕಡೆ ಹೋಗಿ ವಿಚಾರ್ಸಿದ್ರೆ ಗೊತ್ತಾಗತ್ತೆ ಏನ್ ಕಥೆ ಅಂತ ಆ ಕಡೆ ಹೊರಟೆ.
ಮೂಲೆ ಮನೆ ಅಂದ್ರೆ ಕೇವಲ ಒಂದೇ ಮನೆ ಅಲ್ಲ. ನಾಲ್ಕೈದು ಗುಡಿಸಲು ಇರೋ ಜಾಗ ಅದು. ಅಲ್ಲಿನ್ ಗಂಡಸ್ರೂ ಒಂದಷ್ಟು ಕಳ್ತನ ಜುಗಾರಿ ಅಂತ ಊರಲ್ಲಿ ಮನೆ ಹಾಳ್ ಕೆಲ್ಸನೇ ಮಾಡ್ತಾ ಇದ್ರು. ಅದಕ್ಕೇ ಅವರ ಮನೇ ಪಕ್ಕದಲ್ಲಿ ಇರೋ ಕೆರೇಲಿ ಹೆಣ ಸಿಕ್ಕಿದಾಗ ಅವರನ್ನ ಕರ್ಕೊಂಡೋದ್ರು ಅನ್ಸುತ್ತೆ. ಹಾಗೆ ಅಲ್ಲಿಗೆ ತಲುಪಿದಾಗ ಮನೆ ಹೆಂಗಸ್ರೆಲ್ಲಾ ತಲೆ ಮೇಲೆ ಕೈ ಹೊತ್ತು ಕೂತಿದ್ರು.
“ಏನಾಯ್ತು ತಿಮ್ಮಕ್ಕ ಯಾಕ್ ಎಲ್ರೂ ಹಿಂಗ್ ಕೂತಿದೀರ”
“ನಮ್ ಕಥೆ ಏನ್ ಕೇಳ್ತೀಯ ಶಂಕ್ರಣ್ಣ, ಆ ಕೆರೇಲಿ ಯಾವನೋ ಬೇವರ್ಸೀದು ಹೆಣ ಸಿಕ್ಕಿದೆ ಅಂತ ನಮ್ ಮನೆ ಗಂಡಸ್ರನ್ನೆಲ್ಲಾ ಕರ್ಕೊಂಡೋಗವ್ರೆ ಪೋಲಿಸ್ನೋರು. ಯಾರೋ ನರ ಸತ್ತೋರು ಮಾಡಿರೋ ಕೆಲ್ಸಾನ ನಮ್ ಮನೆಯವರ್ ಮೇಲೆ ಹಾಕಿದಾರೆ ಆ ಪೋಲೀಸ್ನೋರು, ನೀನ್ ಹೋಗಿ ಏನಾದ್ರು ಮಾಡಿ ಬಿಡ್ಸು ಶಂಕ್ರಣ್ಣ ಅವ್ರನ್ನ”
“ನಿಂದೊಳ್ಳೆ ಕಥೆ ತಿಮ್ಮಕ್ಕ. ಅದು ಅಂತಿಂತ ಕೇಸ್ ಅಲ್ಲ ಕೊಲೆ ಕೇಸ್. ಚೂರು ಹೆಚ್ಚು ಕಮ್ಮಿ ಆದ್ರೆ ನಿಮ್ ಗಂಡಸ್ರ ಜೊತೆ ನನ್ನನ್ನೂ ಗಲ್ಲಿಗ್ ಹಾಕ್ತಾರೆ ಮತ್ತೆ”
” ಅಯ್ಯೋ ಶಿವ್ನೇ, ಯಾಕಪ್ಪಾ ಹಿಂಗೆಲ್ಲಾ ಮಾಡ್ತಿದ್ಯಾ. ನಾವೇನ್ ಅಂತಾ ದೊಡ್ ಪಾಪ ಮಾಡಿದೀವಿ ಅಂತ ಇಷ್ಟ್ ದೊಡ್ ಶಿಕ್ಷೆ ಕೊಡ್ತಾ ಇದ್ಯಾ. ಥೂ ಆ ಹೆಣ ತಂದ್ ಹಾಕ್ದೋರ ಮನೆ ಕಾಯ್ ಹೋಗ. ಆ ಪೋಲೀಸಪ್ಪ ನೆಗೆದ್ ಬಿದ್ದ್ ಸಾಯಾ. ಈ ಊರಾಗಿರೋ ನರ ಸತ್ ಜನಗಳೆಲ್ಲಾ ಮಣ್ ಆಗ್ ಹೋಗ್ಲಿ. ನಮ್ಮನ್ನ ಕಾಪಾಡೋರು ಯಾರೂ ಇಲ್ವಲ್ಲಾ ದೇವ್ರೇ”
ಹೀಗೆ ಆ ಹೆಂಗಸ್ರೆಲ್ಲಾ ಮನುಷ್ಯರಿಂದ ಹಿಡಿದು ದೇವ್ರಿಗೂ ಶಾಪ ಹಾಕ್ತಾ ಇರೋವಾಗ ನಾನು ಅಲ್ಲಿಂದ ಎದ್ದು ಬಂದೆ. ಇನ್ನ್ ಏನಿದ್ರೂ ಸಂಜೆ ಆಗ್ಬೇಕು ವಿಷಯ ಸರಿಯಾಗಿ ಗೊತ್ತಾಗಕ್ಕೆ ಅಂತ ಅಂಗಡಿ ಕಡೆ ಹೊರಟೆ. ಅಂಗಡಿಗೆ ಬಂದ ಎಲ್ಲರದ್ದೂ ಒಂದೇ ಮಾತು. ಕೆರೇಲಿ ಹೆಣ ಸಿಕ್ಕಿದೆ ಅಂತೆ. ಮೂಲೆ ಮನೆ ಗಂಡಸ್ರನ್ನ ಪೋಲಿಸ್ ಕರ್ಕೊಂಡು ಹೋಗಿದಾರೆ ಅಂತ. ಅದಕ್ಕಿಂತ ಜಾಸ್ತಿ ಯಾರಿಗೂ ಏನೂ ಗೊತ್ತಿಲ್ಲ. ಸಂಜೆ ಆಗ್ತಿದ್ದಂತೆ ಅಂಗಡಿ ಬಾಗಿಲು ಮುಚ್ಚಿ ಮನೆಗೆ ಹೋದವನೇ ಬಟ್ಟೆ ಬದಲಿಸಿ ಹೊರಗಡೆ ಕಾಲಿಟ್ಟೆ. ಇನ್ನು ಇರೋದು ಒಂದೇ ದಾರಿ. ಪೂರ್ತಿ ವಿಷಯ ತಿಳಿಯೋದಿಕ್ಕೆ ಅಲ್ಲಿಗೇ ಹೋಗ್ಬೇಕು. ಆಗ್ಲೆ ಕತ್ತಲೆ ಕವಿಯುತ್ತಾ ಇತ್ತು. ದಾಪುಗಾಲಿಕ್ಕುತ್ತಾ ನಡೆದು ಆ ಕಟ್ಟಡದ ಎದುರು ನಿಂತೆ. ಊರ ಹೊರಗೆ ಇದ್ದ ಅದರ ಹೆಸರು ‘ಮಲಬಾರ್ ವೈನ್ ಶಾಪ್’ ಕೇರಳ ಕಡೆಯಿಂದ ಬಂದಿದ್ದ ಒಬ್ಬ ಮಲಯಾಳಿ ಹಾಕಿದ್ ಬಾರ್ ಅದು.
ಒಳ್ಗಡೆ ಹೋಗ್ತಿದ್ದಂಗೆ ಯಾರನ್ನ ಭೇಟಿ ಆಗ್ಬೇಕು ಅಂತ ನಿರ್ಧಾರ ಮಾಡಿ ಒಳಗಡೆ ಕಾಲಿಟ್ಟೆ. ಅನ್ಕೊಂಡಂತೆ ಮೂಲೆ ಟೇಬಲ್ ಮುಂದೆ ಬಾಟ್ಲಿ, ಉಪ್ಪಿನಕಾಯಿ ಎಲ್ಲಾ ಹರಡಿಕೊಂಡು ಕೂತಿದ್ದ ಆತ. ಅವನೇ ಕಾನ್ಸ್ಟೇಬಲ್ ಕಾಳಪ್ಪ. ಕಾಳಪ್ಪ ಮೂಲತಃ ನಮ್ಮೂರಿನವನಲ್ಲ ಇನ್ನೂರು ಮೈಲಿ ದೂರದ ಸಣ್ಣೇ ಹಳ್ಳಿ ಅನ್ನೋ ಊರಿಂದ ಎರಡು ವರ್ಷದ ಹಿಂದೆ ಇಲ್ಲಿಗೆ ವರ್ಗ ಆಗಿ ಬಂದವನು. ಬೆಳಗಿನ್ ಹೊತ್ತಲ್ಲಿ ನನ್ ಅಂಗಡಿಗೆ ಗಿರಾಕಿ ಆದ್ರೆ, ರಾತ್ರಿ ಇಲ್ಲಿನ್ ಗಿರಾಕಿ. ಆದ್ರೆ ಎರಡೂ ಕಡೆ ಕಾಸೇನು ಕೊಡ್ತಿರ್ಲಿಲ್ಲ ಅವ್ನು. ಆದ್ರೂ ಅವನಿಗೆ ಬೇಕಾದ್ದೆಲ್ಲಾ ಕೊಡ್ತಿದ್ದೆ ನಾನು, ಯಾಕಂದ್ರೆ ಪೋಲೀಸ್ ಅನ್ನೋ ಭಯ ಒಂದು ಕಡೆ. ಜೊತೆಗೆ ನಾನು ಪೇಪರ್ನೋರಿಗೆ ಕೊಡ್ತಿದ್ದ ವಿಷಯಾನೆಲ್ಲಾ ಹೇಳೋದು ಕಾಳಪ್ಪ. ಊರಲ್ಲಿ ಎಲ್ಲಿ ಕಳ್ಳತನ, ಜಗಳ, ಜುಗಾರಿ ಆಯ್ತು. ಯಾರೆಲ್ಲಾ ಅರೆಸ್ಟ್ ಆದ್ರು ಎಲ್ಲಾನೂ ಅವ್ನೇ ಹೇಳ್ತಿದ್ದ ನಂಗೆ.
ಕಾಳಪ್ಪ ಆಗ್ಲೆ ಒಂದು ರೌಂಡ್ ಮುಗಿಸಿ ಯಾವುದೋ ಹಿಂದಿ ಹಾಡನ್ನ ಗುನುಗುತ್ತಾ ಇದ್ದ.
“ಓ ಓನ್ ಕಾಳಪ್ಪ ಭಾರಿ ಖುಷೀಲಿದ್ಯಾ, ಯಾವ್ದಾದ್ರು ಲಾಟ್ರಿ ಹೊಡೀತೋ ಹೆಂಗೆ ”
“ಓ ಶಂಕ್ರಣ್ಣ, ಆ ಲಾಟ್ರಿ ಮನೆ ಕಾಯ್ ಹೋಗ. ನನ್ ಕಥೆ ಏನ್ ಕೇಳ್ತೀಯ ಬಿಡು”
“ಅದ್ಯಾಕ್ ಕಾಳಪ್ಪ ಅಂತದೇನಾಯ್ತು ನಿಂಗೆ”
“ಒಂದಾ ಎರ್ಡಾ, ನೂರಾರು ತೊಂದ್ರೆ. ಊರಲ್ಲಿರೋ ಹೆಂಡ್ತಿ ದಿನಾ ಉಗೀತಾಳೆ ನಮ್ಮನ್ನೆಲ್ಲಾ ಬಿಟ್ಟು ಯಾವ್ದೋ ಕಾಡಲ್ ಹೋಗಿ ಕೂತಿದ್ಯಾ ನಾಚ್ಕೆ ಆಗಲ್ವಾ ಅಂತ. ಇನ್ನು ರಜ ತಗೊಂಡು ಊರಿಗ್ ಹೋಗಣ ಅಂದ್ರೆ ಈ ಊರಲ್ಲಿ ದಿನಾ ಒಂದೊಂದ್ ಕೇಸ್. ಆ ಇನ್ಸ್ಪೆಕ್ಟರ್ ಬೇರೆ ಏಳ್ ತಿಂಗಳ್ಗೇ ಹುಟ್ದವ್ರಂಗೆ ಆಡ್ತಾನೆ”
” ಅದೇ ಮತ್ತೆ ಇವತ್ತು ಬೆಳ್ಗೆ ನೀನು ಟೀ ಕುಡಿಯಾಕೆ ಬಂದಿಲ್ಲ ಅಂದಾಗ್ಲೆ ಅನ್ಕೊಂಡೆ ನಾನು ಏನೋ ದೊಡ್ ಕೇಸೆ ತಗಲಾಕ್ಕೊಂಡಿದೆ ಅಂತ”
” ಅದೇ, ಬೆಳಗ್ಗೆ ನಿನ್ ಅಂಗ್ಡಿಗೆ ಟೇ ಕುಡಿಯಾಣ ಅಂತ ಹೊರಟಿದ್ದೆ. ಅಷ್ಟ್ರಲ್ಲಿ ಯಾವನೋ ಬಂದು ಕೆರೇಲಿ ಒಂದ್ ಹೆಣ ತೇಲ್ತಿದೆ ಅಂದ. ಅದನ್ನ ಕೆರೆ ಇಂದ ಎತ್ತಿ, ಪೋಸ್ಟ್ ಮಾರ್ಟಮ್ ಎಲ್ಲಾ ಆಗ್ಬೇಕಾದ್ರೆ ಇಷ್ಟ್ ಹೊತ್ತಾಯ್ತು ನೋಡು”
” ಅದೇ ಊರವ್ರೆಲ್ಲಾ ಮಾತಾಡ್ತಿದ್ರು. ಮತ್ತೆ ಆ ಮೂಲೆ ಮನೆ ಗಂಡಸ್ರನ್ನಾ ಕರ್ಕೊಂಡೋಗಿದೀರಾ ಅಂತ ಸುದ್ದೀನು ಬಂತು”
” ಹೂ ಮತ್ತೆ, ಅವರ್ ಮನೆ ಪಕ್ದಲ್ಲಿರೋ ಕೆರೇಲೆ ಅಲ್ವಾ ಆ ಹೆಣ ಸಿಕ್ಕಿದ್ದು. ಮತ್ತೆ ಆ ಮೂಲೆ ಮನೆಯೋರು ಏನು ಸಾಚಾಗಳಲ್ಲ ಎಲ್ಲಾ ಫೋರ್ ಟ್ವೆಂಟಿ ನನ್ ಮಕ್ಳು. ಆದ್ರೆ ಎಷ್ಟ್ ಒದ್ರೂ ಬಾಯ್ ಬಿಡ್ತಾ ಇಲ್ಲ ಹಲ್ಕಟ್ ಬೇವರ್ಸಿಗಳು”
” ಅದ್ಸರಿ ಯಾರು ಕೊಲೆ ಆಗಿರೋರು? ”
” ಅದೇ ನಾಲಕ್ ತಿಂಗ್ಳ್ ಹಿಂದೆ ಬಂದಿರೋ ಪಂಚಾಯ್ತಿ ಆಫೀಸರು”
” ಹೌದಾ ಪಾಪ, ಬೋ ಒಳ್ಳೆ ಹುಡ್ಗ ಅವ್ನು. ಮೊನ್ನೆ ತಾನೆ ನಾನು ಭೇಟಿ ಮಾಡ್ ಬಂದಿದ್ದೆ. ಇನ್ನೂ ಮದುವೆ ಮಕ್ಳು ಆಗಿಲ್ಲ. ಅಷ್ಟ್ರಲ್ಲೇ ಹೋಗ್ಬಿಟ್ಟ ಪಾಪ”
” ಅದೇ ಕಣೋ ಈಗ ನಮ್ ತಲೇಗ್ ಬಂದಿರೋದು. ಸರ್ಕಾರದಿಂದ ಬೇರೆ ಆರ್ಡರ್ ಬಂದಿದೆ. ಬೇಗ ಕೊಲೆ ಯಾರ್ ಮಾಡಿದಾರೆ ಅಂತ ಹುಡ್ಕಿ ಅಂತ”
” ಸರಿ ಕಾಳಪ್ಪ ನಾನ್ ಬರ್ತೀನಿ, ಈವಾಗ್ಲೆ ಹೊತ್ತಾಯ್ತು”
” ಅಯ್ಯೋ ನಿಲ್ಲು ಶಂಕ್ರಣ್ಣ, ಒಂದ್ ಬಾಟ್ಲು ಹಾಕ್ಕೊಂಬಿಡು ಹೊಟ್ಟೆಗೆ”
“ಇಲ್ಲಪ್ಪ, ನಾನಿವಾಗ ವ್ರತದಲ್ಲಿದೀನಿ. ಇನ್ನೊಂದಿನಾ ಇಲ್ಲೇ ಸಿಕ್ತೀನಿ ನಿಂಗೆ ಬರ್ಲಾ”
” ಏನ್ ವ್ರತಾನೋ ಏನೂ. ನಾನು ಈ ಊರಿಗ್ ಬಂದಾಗಿಂದಾ ನೋಡ್ತಾ ಇದೀನಿ. ಎಷ್ಟ್ ವ್ರತಾ ಮಾಡಿದ್ರೂ, ಹರ್ಕೆ ಕಟ್ಕೊಂಡ್ರೂ ನಿಂಗೆ ಮಕ್ಳಾಗಿಲ್ಲಾ”
ಮಾತು ನನ್ನ ಬುಡಕ್ಕೇ ಬರೋದನ್ನು ನೋಡಿ ಮೆಲ್ಲಗೆ ಅಲ್ಲಿಂದ ಹೊರಗೆ ಬಂದೆ. ಈಗ ಒಂದಷ್ಟು ವಿಷಯಗಳು ಖಾತ್ರಿಯಾಯ್ತು. ಯಾರು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿತು. ಆದರೆ ಯಾರು ಮಾಡಿದೋರು ಮತ್ತೆ ಯಾಕೆ ಅನ್ನೋದಿಕ್ಕೆ ಇನ್ನೂ ಉತ್ತರ ಸಿಗಲಿಲ್ಲ.
ಮರುದಿನ ವಾರ್ತಾ ಪತ್ರಿಕೆಯಲ್ಲಿ ನಾನು ಕೊಟ್ಟ ಸುದ್ದಿ ಮುಖಪುಟದಲ್ಲೇ ಅಚ್ಚಾಗಿತ್ತು. ‘ ಪಂಚಾಯತ್ ಅಧಿಕಾರಿಯ ಕೊಲೆ, ನಾಲ್ಕು ಜನ ಅನುಮಾನಾಸ್ಪದ ವ್ಯಕ್ತಿಗಳು ಪೋಲೀಸ್ ವಶಕ್ಕೆ’
ಮುಂದೆ ಒಂದು ವಾರ ಕಳೆದರೂ ಆ ಕೇಸು ಮುಂದೆ ಸಾಗಲೇ ಇಲ್ಲ. ಮೂಲೆ ಮನೆಯ ಗಂಡಸರಿಗೆ ಚಿತ್ರಹಿಂಸೆ ಕೊಟ್ಟು ಕೊನೆಗೆ ಯಾವುದೇ ಸಾಕ್ಷಿ ಆಧಾರ ಇಲ್ಲ ಅಂತ ಬಿಟ್ಟು ಕಳಿಸಿದರು. ಪೋಲೀಸರಿಗೆ ಹೆದರಿ ಊರು ಬಿಟ್ಟಿದ್ದವರೆಲ್ಲಾ ಒಬ್ಬರ ಹಿಂದೆ ಒಬ್ಬರು ಹಿಂದಿರುಗಿ ಬಂದರು.
ಬಂದವರ ಬಾಯಲ್ಲಿ ಒಂದೊಂದು ಸುದ್ದಿ.
” ಶಂಕ್ರಣ್ಣ ಕೊಲೆ ಆದ್ನಲ್ಲಾ ಅವಂಗೆ ಒಂದ್ ಹುಡ್ಗಿ ಜೊತೆ ಸಂಭಂದ ಇತ್ತಂತೆ. ಅದ್ಕೆ ಆ ಹುಡುಗಿ ಕಡೆಯೋರು ಅವ್ನನ್ನ ಮುಗ್ಸಿದಾರಂತೆ”
“ಇಲ್ಲ ಶಂಕ್ರಣ್ಣ ಅವ್ನು ಊರ್ ತುಂಬಾ ಸಾಲ ಮಾಡಿದ್ನಂತೆ, ಅದ್ಕೆ ಅವ್ರೆ ಯಾರ್ಗೋ ಸುಪಾರಿ ಕೊಟ್ಟಿದ್ರಂತೆ”
ಹೀಗೆ ಒಬ್ಬೊಬ್ಬ ಒಂದೊಂದು ಕತೆಗಳನ್ನ ಮನಸಿಗೆ ಬಂದಂತೆ ಊರು ತುಂಬಾ ಹರಡುತ್ತಿದ್ದರು. ಆದ್ರೆ ಅದ್ಯಾವ್ದೂ ಪೋಲೀಸರಿಗೆ ಫಲ ನೀಡಲಿಲ್ಲ. ಆ ಕೇಸನ್ನ ಮುಚ್ಚಿ ಮತ್ತದೇ ಮುದುಕರನ್ನ ವಸೂಲಿ ಮಾಡೋ ಕಾಯಕಾನ ಮುಂದುವರೆಸಿದರು. ಊರು ಮತ್ತದೇ ಬಿಂದುವಿಗೆ ಬಂದು ನಿಂತಿತು.
ಹಾಗಾದ್ರೆ ಆ ಕೊಲೆಯ ಹಿಂದಿದ್ದ ರಹಸ್ಯ ಏನು? ಆ ಪ್ರಶ್ನೆಗೆ ಉತ್ತರ ನೀಡುವವ ಒಬ್ಬನೇ ಇದ್ದ ಅಲ್ಲಿ. ಯಾಕಂದ್ರೆ ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಗೊತ್ತಿದ್ದದ್ದು ನನಗೊಬ್ಬನಿಗೆ.
ನಾಲ್ಕು ತಿಂಗಳ ಹಿಂದೆ ಬಂದಿದ್ದ ಆ ಅಧಿಕಾರಿ ಹಳೆಯ ಕಡತಗಳನ್ನೆಲ್ಲಾ ಜಾಲಾಡಿದ್ದ. ಪಂಚಾಯ್ತಿ ಕಟ್ಟಡದಲ್ಲಿ ಟೀ ವ್ಯಾಪಾರ ಮಾಡ್ತಿದ್ದ ನಾನು ಕಂದಾಯ ಕಟ್ಟಿಲ್ಲ ಅಂತ ನೋಟೀಸ್ ಬೇರೆ ಕಳಿಸಿದ್ದ. ಅವನನ್ನು ಭೇಟಿ ಮಾಡಿ ಕಾಲು ಹಿಡಿದು ಬೇಡಿಕೊಂಡ್ರೂ ಬಿಡ್ಲಿಲ್ಲ ಅಸಾಮಿ.
ಅವತ್ತೇ ರಾತ್ರಿ ಅದೇ ‘ಮಲಬಾರ್ ವೈನ್ ಶಾಪ್’ ಅಲ್ಲಿ ಕುಡಿದು ಅವನ ಮನೆಗೆ ಹೋಗಿದ್ದೆ. ಬಾಗಿಲು ತಟ್ಟಿ, ಆತ ತೆಗೆದದ್ದೇ ತಡ ಆತನ ತಲೆಗೊಂದು ಮರದ ತುಂಡಿನಿಂದ ಹೊಡೆದೇ ಬಿಟ್ಟೆ. ಜ್ಞಾನ ತಪ್ಪಿ ಬಿದ್ದ ಆತನನ್ನ ಕೆರೆಯೊಡಲಿಗೆ ತಳ್ಳಿಬಿಟ್ಟೆ.
ಅಲ್ಲಿಗೆ ಕಳ್ಳತನ ದರೋಡೆಯಂತ ಕಾರ್ಯಗಳಲ್ಲೇ ಸ್ಪರ್ಧೆ ಇದ್ದ ನಮ್ಮೂರಿಗೆ ಕೊಲೆ ಮಾಡಿ ನಾನು ಎಲ್ಲರಿಗಿಂತ ಒಂದು ಹೆಜ್ಜೆ ಮಂದಿಟ್ಟೆ.
Image©sreejesh koonery